ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿರುವ ಬೆಳ್ಳೂರು ಎಂಬ ಹಳ್ಳಿ ಇದು. ಇಲ್ಲಿಗೆ ಕೊಕ್ಕರೆಗಳು ಚಳಿಗಾಲದಲ್ಲಿ ಗುಳೆ/ವಲಸೆ ಬರುವುದರಿಂದ ಇದಕ್ಕೆ ಕೊಕ್ಕರೆ ಬೆಳ್ಳೂರು ಎಂಬ ಹೆಸರು ಬಂದಿದೆ. ಈ ಕೊಕ್ಕರೆಗಳನ್ನು ನೋಡಲು ಪ್ರವಾಸಿಗಳು ಇಲ್ಲಿಗೆ ಬರುತ್ತಾರೆ. ಇದು ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಸಿಗುವ ಮದ್ದೂರು ಸಮೀಪದಲ್ಲಿದೆ. ಇಲ್ಲಿ ಕೊಕ್ಕರೆಗಳು ಮಾತ್ರವಲ್ಲದೆ ಅನೇಕ ಜಾತಿಯ ನೀರು ಹಕ್ಕಿಗಳು ಕಾಣ ಸಿಗುತ್ತವೆ. ಆದರೆ ಪಕ್ಷಿಧಾಮ, ಹಕ್ಕಿಗಳು ಸ್ವಚ್ಛಂದವಾಗಿ ಇರಲೆಂದೇ ನಿರ್ಮಿಸಿರುವ ತಾಣ, ಹಾಗಾಗಿ ಇಲ್ಲಿ ದಿನದಲ್ಲಿ ಕೆಲವೇ ಗಂಟೆಗಳ ಕಾಲ ವಿಹರಿಸಿ ಬರಬಹುದು. ಇದಕ್ಕೆ ನಿರ್ದಿಷ್ಟವಾದ ಶುಲ್ಕವೂ ವಿಧಿಸಲಾಗುವುದು. ಬೋನಿನಲ್ಲಿ ಹಕ್ಕಿಗಳನ್ನು ನೋಡುವುಕ್ಕಿಂತ ಅವುಗಳು ಸ್ವಚ್ಛಂದವಾಗಿ ಹಾರಾಡುತ್ತಾ ಹಾಡುವುದನ್ನು ಕುಟುಂಬದವರೊಂದಿಗೆ ನೋಡಲು ಕೇಳಲು ಎಷ್ಟೋ ಆನಂದ ಸಂತೋಷ. ಈ ಪ್ರದೇಶವು ಬೆಂಗಳೂರು - ಮೈಸೂರು ನಡುವಿನ ಹೆದ್ದಾರಿಯ ಸಮೀಪದಲ್ಲೇ ಸ್ವಲ್ಪ ಒಳಭಾಗಕ್ಕೆ ಪ್ರಯಾಣಿಸಿದರೆ ಸಿಗುತ್ತದೆ. ಪ್ರಕೃತಿ ಮತ್ತು ಪಕ್ಷಿ ಸಂತಾನ ಒಂದಕ್ಕೊಂದು ಬೆರೆತುಕೊಂಡಿರುವ ವಿಸ್ಮಯವನ್ನು ಇಲ್ಲಿ ಕಾಣಬಹುದು. ಇದು ಬೇರೆ ಪಕ್ಷಿಧಾಮಕ್ಕಿಂತಲೂ ಭಿನ್ನವಾಗಿದೆ, ಹೇಗೆಂದರೆ ಇದು ಪಕ್ಷಿಗಳಿಗೆಂದು ಮಾನವ ನಿರ್ಮಿಸಿದ ಸ್ಥಳವಲ್ಲ ಬದಲಿಗೆ ಇದೊಂದು ಗ್ರಾಮವಾಗಿದ್ದು ಇಲ್ಲಿ ಪೆಲಿಕಾನ್ ಹಾಗೂ ಪೇಂಟೆಡ್ ಸ್ಟ್ರೋಕ್ ಅವುಗಳಂಥ ವಿಶೇಷವಾದ ಪಕ್ಷಿಗಳು ಸ್ವತಃ ತಮ್ಮ ಗೂಡುಗಳನ್ನು ಕಟ್ಟಿಕೊಂಡು ನಿರಂತರವಾಗಿ ನಿರ್ಮಿಸಿಕೊಂಡಿರುವ ಪಕ್ಷಿ ವನವಾಗಿದೆ. ಇಲ್ಲಿನ ಸ್ಥಳೀಯ ನಿವಾಸಿಗಳೂ ಕೂಡ ಪಕ್ಷಿಗಳ ಬಗ್ಗೆ ಬಹಳ ಕಾಳಜಿಹೊಂದಿದ್ದು ಅವುಗಳ ರಕ್ಷಣೆ ಮಾಡುತ್ತಿದ್ದಾರೆ. ಹಾಗೆಯೇ ಪಕ್ಷಿಗಳೂ ಕೂಡ ಗ್ರಾಮದ ಸೌಂದರ್ಯವನ್ನು ಕಾಪಾಡಿಕೊಂಡಿದ್ದು ಮಾತ್ರವಲ್ಲದೆ ತಮ್ಮ ಮೂಲಕ ಈ ಪುಟ್ಟ ಗ್ರಾಮವನ್ನು ಇಡೀ ನಾಡಿನಲ್ಲೇ ಜನಪ್ರಿಯಗೊಳಿಸಿವೆ ಎಂದರೆ ತಪ್ಪಾಗಲಾರದು.